`
ಕರ್ನಾಟಕದ ಧಾರವಾಡದಲ್ಲಿನ ಜವಳಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ರಮೇಶ್ ಗೌಡ ಸಂಕಷ್ಟದಲ್ಲಿದಾರೆ. ನಿವೃತ್ತಿಯಾಗಿ ಆರು ತಿಂಗಳಾದರೂ ಕೂಡ ಅವರಿಗೆ ಗ್ರ್ಯಾಚ್ಯುಟಿ ಸಿಕ್ಕಿಲ್ಲ. ಜೊತೆಗೆ, ಕಂಪೆನಿಯ ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿಲ್ಲ. ಅವರಿಗೆ ಗ್ರ್ಯಾಚ್ಯುಟಿ ಎಲ್ಲಿ ಸಿಗುವುದೆ ಇಲ್ಲವೆನೋ ಎನ್ನುವ ಭಯ ಕಾಡುತ್ತಿದೆ. ಆದರೆ ಕರ್ನಾಟಕ ಸರ್ಕಾರ ತೆಗೆದುಕೊಂಡಿರೋ ಮಹತ್ವದ ನಿರ್ಧಾರದಿಂದ ರಮೇಶ್ ಅಂತಹವರು ಇಂತಹ ತೊಂದರೆ ಎದುರಿಸುವುದು ತಪ್ಪುತ್ತದೆ. ರಾಜ್ಯ ಸರ್ಕಾರ, ಎಲ್ಲಾ ಕಂಪೆನಿಗಳಿಗೂ ಗ್ರ್ಯಾಚ್ಯುಟಿ ವಿಮೆ ಕಡ್ಡಾಯ ಮಾಡಿದೆ. ಈ ವಿಮೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ. ಜತೆಗೆ ಗ್ರ್ಯಾಚುಟಿ ಲೆಕ್ಕ ಹಾಕುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.
ಉದ್ಯೋಗಿಗಳ ಹಿತರಕ್ಷಣೆಗಾಗಿ 1972 ರಲ್ಲಿ ಗ್ರ್ಯಾಚ್ಯುಟಿ ಕಾಯ್ದೆ ಜಾರಿಗೆ ತರಲಾಯಿತು. ಈ ಕಾಯ್ದೆಯಡಿ, 10 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿರುವ ಸಂಸ್ಥೆಗಳ ಸಿಬ್ಬಂದಿ ಗ್ರ್ಯಾಚ್ಯುಟಿಗೆ ಅರ್ಹರಾಗುತ್ತಾರೆ. ಇದು ಉದ್ಯೋಗದಾತರು ತಮ್ಮ ಸಂಸ್ಥೆಯೊಂದಿಗಿನ ದೀರ್ಘಾವಧಿ ಬಾಂಧವ್ಯಕ್ಕಾಗಿ ನೀಡುವ ಹಣಕಾಸು ಸೌಲಭ್ಯ. ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, ರಾಜೀನಾಮೆ ಕೊಟ್ಟರೆ ಅಥವಾ ಅವರನ್ನು ಕೆಲಸದಿಂದ ತೆಗೆದುಹಾಕಿದರೆ ಅಥವಾ ಅವರು ಸೇವೆಯಿಂದ ನಿವೃತ್ತರಾದರೆ, ಅಂತಹವರು ಗ್ರ್ಯಾಚ್ಯುಟಿಗೆ ಅರ್ಹರಾಗುತ್ತಾರೆ. ಗ್ರ್ಯಾಚ್ಯುಟಿಯಾಗಿ ಸಿಗುವ ಮೊತ್ತ, ಉದ್ಯೋಗಿಯ ಸೇವಾವಧಿ ಮತ್ತು ಆ ಕಂಪೆನಿಯಲ್ಲಿ ಪಡೆದಿರೊ ಮಾಸಿಕ ವೇತನವನ್ನು ಅವಲಂಬಿಸಿರುತ್ತದೆ.
ಕಂಪೆನಿ ತೊರೆದಾಗ ಎಷ್ಟು ಗ್ರ್ಯಾಚ್ಯುಟಿ ಸಿಗುತ್ತದೆ ಎನ್ನುವುದನ್ನು ಲೆಕ್ಕ ಮಾಡುವುದಕ್ಕೆ ಒಂದು ಫಾರ್ಮುಲಾ ಇದೆ. ಸಾಮಾನ್ಯವಾಗಿ, ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೂ 15 ದಿನಗಳ ಸಂಬಳ ಗಣನೆಗೆ ತೆಗೆದುಕೊಳ್ಳಲಾಗುವುದು. ಆದಾಗ್ಯೂ, ವಾರಾಂತ್ಯಗಳನ್ನ ಈ ಲೆಕ್ಕಾಚಾರಕ್ಕೆ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಹೀಗಾಗಿ, ಪ್ರತಿ ತಿಂಗಳು 26 ದಿನಗಳ ಲೆಕ್ಕಾಚಾರದಲ್ಲಿ ಗ್ರ್ಯಾಚ್ಯುಟಿ ಲೆಕ್ಕಾಚಾರ ಹಾಕಲಾಗುತ್ತದೆ. ಉದಾಹರಣೆಗೆ, ರಮೇಶ್ ಅವರು ಜವಳಿ ಕಂಪೆನಿಯಲ್ಲಿ 28 ವರ್ಷ ಸೇವೆ ಸಲ್ಲಿಸಿದ್ದು, ಅವರ ಕೊನೆಯ ಮಾಸಿಕ ವೇತನ 30 ಸಾವಿರ ರೂಪಾಯಿ ಆದರೆ, ಅವರ ಗ್ರ್ಯಾಚ್ಯುಟಿ ಎಷ್ಟು ಅಂತಾ ಲೆಕ್ಕ ಹಾಕಿ ತಿಳಿದುಕೊಳ್ಳೋಣ.
ಗ್ರ್ಯಾಚ್ಯುಟಿ = ಕೊನೆಯ ಮಾಸಿಕ ವೇತನ x ಸೇವೆ ಸಲ್ಲಿಸಿದ ವರ್ಷಗಳು x 15/26, ಅಂದರೆ 30,000 x 28 x 15/26. ಅಂದರೆ, ರಮೇಶ್ ಅವರಿಗೆ 4 ಲಕ್ಷ 84 ಸಾವಿರದ 615 ರೂಪಾಯಿ ಗ್ರ್ಯಾಚ್ಯುಟಿ ಸಿಗತ್ತೆ.
ಕಂಪೆನಿಯು ಬಯಸಿದರೆ, ವರ್ಷಕ್ಕೆ 15 ದಿನ ಮೇಲ್ಪಟ್ಟು ಕೂಡ ಗ್ರ್ಯಾಚ್ಯುಟಿ ಕೊಡಬಹುದು. ಕೆಲವು ಕಂಪೆನಿಗಳು ತಮ್ಮ ಬ್ರಾಂಡಿಂಗ್ ಹೆಚ್ಚಿಸಿಕೊಳ್ಳಕ್ಕೆ, ಹಾಗೇ ಉದ್ಯೋಗಿಗಳ ವಿಶ್ವಾಸ ಗಳಿಸಿಕೊ ಈ ಹೆಚ್ಚಳ ಮಾಡೋದೂ ಇದೆ. ಗ್ರ್ಯಾಚ್ಯುಟಿ ಬಾಧ್ಯತೆಯನ್ನ ಪೂರೈಸೋಕೆ ಕೆಲವು ಕಂಪೆನಿಗಳು ಸಾಮೂಹಿಕ ಗ್ರ್ಯಾಚ್ಯುಟಿ ವಿಮೆ ಪಡೆಯುವುದನ್ನು ನೋಡಬಹುದು. ದೇಶದ ಬಹುತೇಕ ಎಲ್ಲಾ ಜೀವ ವಿಮಾ ಕಂಪನಿಗಳು ಈ ವಿಮೆ ಕೊಡುತ್ತಿವೆ. ಎಲ್ಲಾ ಉದ್ಯೋಗಿಗಳಿಗೂ ಸಮಯಕ್ಕೆ ಸರಿಯಾಗಿ ಗ್ರ್ಯಾಚ್ಯುಟಿ ಸಿಗಬೇಕು ಎನ್ನುವ ಕಾರಣಕ್ಕೆ ಎಲ್ಲಾ ಕಂಪೆನಿಗಳು 2024 ರಿಂದ ಗ್ರ್ಯಾಚ್ಯುಟಿ ವಿಮೆ ಪಡೆಯುವುದನ್ನು ಕರ್ನಾಟಕ ಸರ್ಕಾರ ಕಡ್ಡಾಯ ಮಾಡಿದೆ.
ಈ ಪಾಲಿಸಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಇತರ ವಿಮಾ ಕವರೇಜ್ ಗಳಂತೆ, ವಾರ್ಷಿಕ ಪ್ರೀಮಿಯಂ ಪಾವತಿಸಬೇಕು. ಉದಾಹರಣೆಗೆ, ಎಬಿಸಿ ಕಂಪೆನಿಯಲ್ಲಿ 100 ಉದ್ಯೋಗಿಗಳಿದ್ದರೆ, ಕಂಪೆನಿಯು ತನ್ನ ಗ್ರ್ಯಾಚ್ಯುಟಿ ಬಾಧ್ಯತೆವಾಗಿ ವಿಮೆ ಪಡೆದರೆ ಅದು ವಾರ್ಷಿಕ ಪ್ರೀಮಿಯಂ ಪಾವತಿಸಬೇಕು. ಪ್ರತಿ ವರ್ಷ ಉದ್ಯೋಗಿಗಳ ಸಂಖ್ಯೆ ಹೆಚ್ಚಾದ ಹಾಗೆ, ಅವರ ವೇತನ ಹೆಚ್ಚಾದ ಹಾಗೆ, ಗ್ರ್ಯಾಚ್ಯುಟಿ ಕವರ್ ಕೂಡ ಹೆಚ್ಚಾಗುಯತ್ತದೆ. ಹೀಗಾಗಿ ಪ್ರತಿ ವರ್ಷ ಪಾವತಿ ಮಾಡಬೇಕಾಗಿರುವ ವಿಮಾ ಪ್ರೀಮಿಯಂ ಮೊತ್ತ ಕೂಡ ಹೆಚ್ಚಾಗುತ್ತದೆ. ಗ್ರ್ಯಾಚ್ಯುಟಿ ಗಾಗಿನ ವಾರ್ಷಿಕ ಪ್ರೀಮಿಯಂಗಾಗಿ ಕಂಪೆನಿಗಾಗಿ ಒಂದು ಕಾರ್ಪಸ್ ರೂಪುಗೊಳ್ಳುತ್ತದೆ. ಈ ಫಂಡ್ ನಿಂದ ಉದ್ಯೋಗಿಗಳಿಗೆ ಗ್ರ್ಯಾಚ್ಯುಟಿ ಪಾವತಿಸಲಾಗುತ್ತದೆ. ಅಂದರೆ ಕಂಪೆನಿಯು ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದರೆ ವಿಮಾ ಕಂಪೆನಿಯು ಉದ್ಯೋಗಿಗಳ ಗ್ರ್ಯಾಚ್ಯುಟಿ ಪಾವತಿ ಮುಂದುವರಿಸುತ್ತದೆ. ಇದರಿಂದಾಗಿ, ರಮೇಶ್ ಅಂತಹವರು ಆತಂಕ ಪಡಬೇಕಾದ ಅಗತ್ಯ ಇರೋದಿಲ್ಲ.
ಗ್ರ್ಯಾಚ್ಯುಟಿ ವಿಮೆಗಾಗಿ ಪಾವತಿಸೋ ಪ್ರೀಮಿಯಂ ಮೊತ್ತವನ್ನ ಖರ್ಚುಗಳಿಗೆ ಸೇರಿಸಿ ಅಷ್ಟು ಮೊತ್ತವನ್ನ ವಾರ್ಷಿಕ ಆದಾಯದಿಂದ ಕಡಿಮೆ ಮಾಡಲು ಅವಕಾಶ ಇದೆ. ಇದರಿಂದಾಗಿ, ತೆರಿಗೆ ಕಡಿತದ ಲಾಭ ಕೂಡ ಸಿಗತ್ತೆ. ಸರ್ಕಾರಿ ವಲಯದಲ್ಲಿ, ನಿವೃತ್ತಿ ಸಂದರ್ಭದಲ್ಲಿ ಸಿಗುವ ಗ್ರ್ಯಾಚ್ಯುಟಿ ಮೊತ್ತ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರತ್ತೆ. ಆದರೆ ಖಾಸಗಿ ವಲಯ ಆದ್ರೆ, ಕೆಲವು ಷರತ್ತುಗಳಿಗೆ ಒಳಪಟ್ಟು 20 ಲಕ್ಷ ರೂಪಾಯಿವರೆಗಿನ ಗ್ರ್ಯಾಚ್ಯುಟಿ ಮೊತ್ತ ತೆರಿಗೆ ರಹಿತವಾಗಿರಲಿದೆ.
ತೆರಿಗೆ ಮತ್ತು ಹೂಡಿಕೆ ತಜ್ಞರಾದ ಬಲವಂತ್ ಜೈನ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾರೆ. ಕಂಪೆನಿಗಳಿಗೆ ಗ್ರ್ಯಾಚ್ಯುಟಿ ವಿಮೆ ಕಡ್ಡಾಯ ಮಾಡಿರುವ ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ ಸ್ವಾಗತಾರ್ಹ ಎಂದೇ ಹೇಳಬಹುದು. ಇದು ಕಂಪೆನಿಯ ಆಡಳಿತ ಮಂಡಳಿಯುವ ಗ್ರ್ಯಾಚ್ಯುಟಿ ಬಗ್ಗೆ ಚಿಂತೆ ಮಾಡೋದನ್ನು ತಪ್ಪಿಸಿದೆ. ಒಂದು ವೇಳೆ ಯಾವುದೇ ಸಂಸ್ಥೆ, ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿಕೊಂಡರೆ, ಅದರ ಉದ್ಯೋಗಿಗಳು ಗ್ರ್ಯಾಚ್ಯುಟಿ ಸಿಗುವ ಬಗ್ಗೆ ಆತಂಕ ಪಡಬೇಕಾದ ಅಗತ್ಯ ಇರೋದಿಲ್ಲ. ಇಂತಹ ಸನ್ನಿವೇಶಗಳಲ್ಲಿ, ವಿಮಾ ಕಂಪೆನಿಯು ಗ್ರ್ಯಾಚ್ಯುಟಿ ಮೊತ್ತವನ್ನ ಪಾವತಿ ಮಾಡುತ್ತದೆ. ಕಂಪೆನಿ ಮತ್ತು ಅದರ ಉದ್ಯೋಗಿಗಳಿಗೆ ಸರ್ಕಾರದ ಈ ಉಪಕ್ರಮದಿಂದ ಅನುಕೂಲವಾಗಲಿದೆ.
ದೇಶದಲ್ಲಿ ಸ್ವಲ್ಪ ಸಮಯದಿಂದ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡಲಾಗುತ್ತಿದೆ. ದೊಡ್ಡ ಕಂಪೆನಿಗಳು ಆರ್ಥಿ ಮುಗ್ಗಟ್ಟನ್ನು ಎದುರಿಸಬಲ್ಲವು, ಆದರೆ ಸ್ಟಾರ್ಟ್ ಅಪ್ ಮತ್ತು ಸಣ್ಣ ಕಂಪೆನಿಗಳು ಸಾಮೂಹಿಕ ಲೇ ಆಫ್ ಅಥವಾ ಸಾಮೂಹಿಕ ರಾಜೀನಾಮೆಗಳಂತಹ ಸಂದರ್ಭಗಳನ್ನ ನಿಭಾಯಿಸೋಕೆ ಕಷ್ಟವಾಗುತ್ತಿದೆ. ಇಂತಹ ಸನ್ನಿವೇಶಗಳಲ್ಲಿ ಸಾಮೂಹಿಕ ಗುಂಪು ವಿಮೆ ನೆರವಿಗೆ ಬರತ್ತೆ. ಪ್ರಸ್ತುತ ಈ ವಿಮೆ, ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರ ಕಡ್ಡಾಯ. ಇತರ ರಾಜ್ಯಗಳು ಕೂಡ ಇಂತಹ ಉಪಕ್ರಮ ತೆಗೆದುಕೊಂಡಲ್ಲಿ, ಅಪಾರ ಸಂಖ್ಯೆಯ ಉದ್ಯೋಗಿಗಳಿಗೆ ಅನುಕೂಲ ಆಗಲಿದೆ.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ