`
ಇತ್ತೀಚೆಗೆ, ಗಜೇಂದ್ರ ಅವರಿಗೆ ವಾಟ್ಸ್ಅಪ್ ನಲ್ಲಿ 22 ಸಾವಿರ ರೂಪಾಯಿ ಮೊತ್ತದ ವಿದ್ಯುತ್ ಬಿಲ್ ಪಾವತಿ ಬಾಕಿ ಇದೆ ಎನ್ನುವ ಸಂದೇಶ ಬರುತ್ತದೆ. ಆ ಸಂದೇಶದ ಜೊತೆಗೆ ಪೇಮೆಂಟ್ ಲಿಂಕ್ ಕೂಡ ಕೊಡಲಾಗಿರುತ್ತದೆ. ಅದರ ಜೊತೆಗೆ ಒಂದು ಎಚ್ಚರಿಕೆ ಕೂಡ ಇರುತ್ತದೆ. ಆ ದಿನ ರಾತ್ರಿ 9 ಗಂಟೆಯೊಳಗೆ ಬಿಲ್ ಪಾವತಿ ಮಾಡದೇ ಹೋದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಲಾಗಿ ಅಂತಾ ಆ ಮೆಸೇಜ್ ತಿಳಿಸುತ್ತದೆ. ಈ ಸಂದೇಶ ನೋಡಿ, ಗಜೇಂದ್ರ ಅವರು ವಿಚಲಿತರಾಗಲಿಲ್ಲ. ಏಕೆಂದರೆ ಅವರ ಫ್ಲಾಟ್ ನಲ್ಲಿ ಪ್ರಿಪೇಯ್ಡ್ ಮೀಟರ್ ಇತ್ತು. ಪ್ರತ್ಯೇಕ ಬಿಲ್ ಗಳನ್ನ ಈಗಾಗಲೇ ಪಾವತಿ ಮಾಡಲಾಗಿತ್ತು. ಇದು ವಂಚನೆಯ ಉದ್ದೇಶದಿಂದ ಕಳುಹಿಸಿರೋ ಮೆಸೇಜ್ ಎನ್ನುವುದು ಗಜೇಂದ್ರಗೆ ಗೊತ್ತಾಯಿತು. ತಕ್ಷಣ ಅವರು ಅದನ್ನ ಡಿಲೀಟ್ ಮಾಡುತ್ತಾರೆ. ಆದರೆ ಈ ರೀತಿ ಹಣದ ಬೇಡಿಕೆ ಇಡುವ ಅನೇಕ ಸಂದೇಶಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ರವಾನೆಯಾಗುತ್ತಿವೆ. ನಿಮಗೂ ಕೂಡ ಇಂತಹ ಸಂದೇಶಗಳು, ಕರೆಗಳು ಬಂದಿರಬಹುದು. ಕೆಲವೊಂದು ಸಲ ಸಾಮಾನ್ಯ ಮೆಸೇಜ್, ಇನ್ ಕೆಲವು ಸಲ ವಾಟ್ಸ್ ಅಪ್ ಮೆಸೇಜ್ ಬಂದಿರುತ್ತದೆ. ಇಂತಹ ಸಂದೇಶಗಳನ್ನ ಸುಮ್ಮನೆ ಡಿಲೀಟ್ ಮಾಡಬೇಡಿ. ಅದರ ಬಗ್ಗೆ ದೂರು ಕೊಡುವುದು ನಿಮ್ಮ ಜವಾಬ್ದಾರಿಯಾಗುತ್ತದೆ.
ಜನರನ್ನು ಸೈಬರ್ ಅಪರಾಧ ಮತ್ತು ವಂಚನೆಗಳಿಂದ ರಕ್ಷಿಸಲು ಸರ್ಕಾರ ಇತ್ತೀಚೆಗೆ ಚಕ್ಷು ಅನ್ನೋ ಫ್ಲಾಟ್ಫಾರ್ಮ್ ತೆರೆದಿದೆ. ಸೈಬರ್ ವಂಚಕರು ನಿಮಗೆ ಕರೆ ಮಾಡಿ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ನಿಮಗೆ ಬ್ಲಾಕ್ ಮೇಲ್ ಮಾಡುವ ಪ್ರಯತ್ನ ಮಾಡುತ್ತಿದ್ದರೆ ತಕ್ಷಣ ಚಕ್ಷು ಪ್ಲಾಟ್ ಫಾರ್ಮ್ ನಲ್ಲಿ ರಿಪೋರ್ಟ್ ಮಾಡಿ. ಹೀಗೆ ಮಾಡುವುದರಿಂದ ನೀವು ವಂಚನೆಯಿಂದ ನಿಮ್ಮನ್ನ ರಕ್ಷಿಸಿಕೊಳ್ಳುವುದರ ಜೊತೆಗೆ ಇತರರನ್ನೂ ರಕ್ಷಣೆ ಮಾಡಬಹುದು. ಮೇ 2023 ರಲ್ಲಿ ದೂರಸಂಪರ್ಕ ಇಲಾಖೆ ಅಥವಾ ಡಿಒಟಿ, ಮೊಬೈಲ್ ಬಳಕೆದಾರರ ಸುರಕ್ಷತೆ ಹೆಚ್ಚಿಸುವುದಕ್ಕೆ ಸಂಚಾರ ಸಾರಥಿ ಪೋರ್ಟಲ್ ಅನಾವರಣ ಮಾಡಿದೆ. ದೂರ ಸಂಪರ್ಕ ಸೇವೆಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಇಲ್ಲಿ ದಾಖಲಿಸಬಹುದು. ಈವರೆಗೆ ಸುಮಾರು 13.87 ಲಕ್ಷ ಜನರು ತಮ್ಮ ಕಳುವಾದ ಅಥವಾ ಕಳೆದುಕೊಂಡ ಮೊಬೈಲ್ ಬಗ್ಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಮತ್ತು ಇತರ ತನಿಖಾ ಏಜೆನ್ಸಿಗಳ ನೆರವಿನೊಂದಿಗೆ 7.37 ಲಕ್ಷ ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದೆ. ಅಷ್ಟೇ ಅಲ್ಲ, ವಂಚಕ ಪ್ರಕರಣಗಳಲ್ಲಿ ಜನರು ಕಳೆದುಕೊಂಡಿದ್ದ 1 ಸಾವಿರದ 8 ಕೋಟಿ ರೂಪಾಯಿಗಳನ್ನು ರೀಫಂಡ್ ಮಾಡಲಾಗಿದೆ. ಇದಲ್ಲದೇ ವಂಚಕ ಘಟನೆಗಳ ಸಂಬಂಧ 59 ಲಕ್ಷ ಫೋನ್ ಸಂಪರ್ಕಗಳನ್ನು ಬ್ಲಾಕ್ ಮಾಡಲಾಗಿದೆ. ಡಿಒಟಿ ಪ್ರಕಾರ, ದೈನಂದಿನ ಆಧಾರದಲ್ಲಿ ಸುಮಾರು ಎರಡೂವರೆ ಸಾವಿರ ಅನುಮಾನಾಸ್ಪದ ಫೋನ್ ಸಂಪರ್ಕಗಳನ್ನು ಬ್ಲಾಕ್ ಮಾಡಲಾಗುತ್ತಿದೆ.
ಸೈಬರ್ ಅಪರಾಧಗಳನ್ನ ಸಮರ್ಥವಾಗಿ ನಿಗ್ರಹಿಸುವುದಕ್ಕೆ ಚಕ್ಷು ಅನಾವರಣ ಮಾಡಲಾಗಿದೆ. ಪ್ರಸ್ತುತ, ಈ ಸೌಲಭ್ಯ ಸಾರಥಿ ಪೋರ್ಟಲ್ ನಲ್ಲಿ ಲಭ್ಯವಿದೆ. ಮುಂದುವರಿದು, ಚಕ್ಷು, ಆ್ಯಪ್ ಆಗಿ ಕೂಡ ಬಿಡುಗಡೆಯಾಗಲಿದೆ. ಹಾಗಿದ್ದರೆ ಇಲ್ಲಿ ನೀವು ಯಾವ ರೀತಿ ದೂರು ನೀಡಬಹುದು? ಎನ್ನುವುದನ್ನು ತಿಳಿದುಕೊಳ್ಳೋಣ
ದೂರು ಸಲ್ಲಿಸಲು ನೀವು ಸಂಚಾರಿ ಸಾರಥಿ ಪೋರ್ಟಲ್ ತೆರೆಯಬೇಕು. ಅದರ ಹೋಂ ಪೇಜ್ ನಲ್ಲಿ ಸಿಟಿಜನ್ ಸರ್ವೀಸಸ್ ಆಪ್ಷನ್ ನೋಡಿ.. ಅದರಲ್ಲಿ ರಿಪೋರ್ಟ್ ಸಸ್ಪೆಕ್ಟೆಡ್ ಫ್ರಾಡ್ ಕಮ್ಯುನಿಕೇಷನ್ ಟು ಚಕ್ಷು ಅನ್ನೋದನ್ನ ಕ್ಲಿಕ್ ಮಾಡಿ. ನಂತರ ಕಂಟಿನ್ಯೂ ಕೊಡಿ.. ಹೊಸ ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ, ನೀವು ನಿಮ್ಮನ್ನು ಯಾವ ಮಾಧ್ಯಮದ ಮೂಲಕ ಸಂಪರ್ಕಿಸಲಾಯಿತು ಎನ್ನುವುದನ್ನು ದಾಖಲಿಸಬೇಕು. ಅಂದರೆ ಕರೆ, ಎಸ್ ಎಂ ಎಸ್, ವಾಟ್ಸ್ ಅಪ್ ಹೀಗೆ ಯಾವುದರ ಮೂಲಕ ನಿಮ್ಮ ಮೇಲೆ ಬಲೆ ಬೀಸಲಾಗಿತ್ತು ಎನ್ನುವುದನ್ನು ನಮೂದಿಸಬೇಕು.. ಶಂಕಿತ ವಂಚನೆಯ ಕ್ಯಾಟಗರಿ ಸೆಲೆಕ್ಟ್ ಮಾಡಿ.. ಅಲ್ಲಿ ನಿಮಗೆ ಅನೇಕ ಆಪ್ಷನ್ ಗಳಿರುತ್ತವೆ. ಅಂದರೆ ಬ್ಯಾಂಕ್ ಖಾತೆಯಲ್ಲಿ ವಂಚನೆ, ಕೆವೈಸಿ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಿಗೆ ಸಂಬಂಧಿಸಿದ ವಂಚಕ ಚಟುವಟಿಕೆಗಳು, ಅನಿಲ-ವಿದ್ಯುತ್ ಸಂಪರ್ಕದಲ್ಲಿ ವಂಚನೆ, ಸರ್ಕಾರಿ ಅಧಿಕಾರಿ ಸೋಗಿನಲ್ಲಿ ವಂಚನೆ, ಅಶ್ಲೀಲ ಚಿತ್ರ, ವಿಡಿಯೋ ನೆಪದಲ್ಲಿ ಬೆದರಿಕೆ ಹೀಗೆ ಬೇರೆ ಬೇರೆ ಆಯ್ಕೆಗಳಿರುತ್ತವೆ. ಪ್ರಶ್ನಾರ್ಹ ಅಥವಾ ಶಂಕಾಸ್ಪದ ಕರೆ ಅಥವಾ ಸಂದೇಶಗಳ ಬಗ್ಗೆ ದೂರು ದಾಖಲಿಸುವುದಕ್ಕೂ ಅವಕಾಶ ಇದೆ. ವಂಚನೆಯ ಕ್ಯಾಟಗರಿ ಆಯ್ಕೆ ಮಾಡಿಕೊಂಡ ಮೇಲೆ, ಪ್ರೂಫ್ ಆಗಿ ಸ್ಕ್ರೀನ್ ಶಾಟ್ ಅಟ್ಯಾಚ್ ಮಾಡಿ. ಮುಂದಿನ ಸ್ಟೆಪ್ ನಲ್ಲಿ, ಯಾವ ಸಮಯದಲ್ಲಿ ನಿಮಗೆ ಆ ಕರೆ ಬಂತು ಅಥವಾ ಸಂದೇಶ ರವಾನೆಯಾಗಿದೆ ಎನ್ನುವುದನ್ನು ದಾಖಲಿಸಿ. ನಿಮ್ಮ ದೂರನ್ನು 500 ಪದಗಳಲ್ಲಿ ವಿವರಿಸಿ. ಇದಾದ ಬಳಿಕ, ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನ ನಮೂದಿಸಿ.
ನೀವು ದಾಖಲಿಸಿರುವ ದೂರನ್ನು ವೆರಿಫೈ ಮಾಡುವುದಕ್ಕೆ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ನೀವು ಈ ಒಟಿಪಿ ನಮೂದಿಸ್ತಾ ಇದ್ದ ಹಾಗೆ, ನಿಮ್ಮ ಕಂಪ್ಲೇಂಟ್ ರಿಜಿಸ್ಟರ್ ಆಗುತ್ತದೆ. ಚಕ್ಷು ಪೋರ್ಟಲ್ ನಲ್ಲಿ ದೂರು ದಾಖಲಾಗುತ್ತಿದ್ದ ಹಾಗೆ, ಸಂಬಂಧಪಟ್ಟ ಏಜೆನ್ಸಿಗಳು ಕಾರ್ಯೋನ್ಮುಖವಾಗತ್ತವೆ. ನಿಮಗೆ ಯಾವ ಸಂಖ್ಯೆಯಿಂದ ಕರೆ ಬಂದಿರುತ್ತದೆಯೋ ಅದನ್ನು ಪರಿಶೀಲಿಸಲಾಗುತ್ತದೆ. ಒಂದು ವೇಳೆ ವೆರಿಫಿಕೇಷನ್ ಫೇಲ್ ಆದರೆ, ಆ ನಂಬರ್ ಬ್ಲಾಕ್ ಮಾಡಲಾಗುತ್ತದೆ. ಹೀಗೆ ದೂರಸಂಪರ್ಕ ಕಂಪೆನಿಗಳು, ಆರ್ ಬಿ ಐ, ಲಾ ಎನ್ಫೋರ್ಸ್ ಮೆಂಟ್ ಏಜೆನ್ಸಿಗಳು, ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಗುರುತಿನ ಚೀಟಿ ನೀಡುವ ಅಧಿಕಾರಿಗಳ ನಡುವೆ ಮಾಹಿತಿ ವಿನಿಮಯ ಮತ್ತು ಸಮನ್ವಯ ಏಜೆನ್ಸಿಯಾಗಿ ಚಕ್ಷು ಕಾರ್ಯನಿರ್ವಹಿಸುತ್ತದೆ..
ವೈಯಕ್ತಿಕ ಹಣಕಾಸು ತಜ್ಞರಾದ ಜಿತೇಂದ್ರ ಸೋಲಂಕಿ ಸಹ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಪ್ರಕರಣಗಳ ಬಗ್ಗೆ ದೂರು ನೀಡುವುದಕ್ಕೆ ಯಾವುದೇ ಫ್ಲಾಟ್ ಫಾರ್ಮ್ ಇಲ್ಲದೇ ಇದ್ದಿದ್ದು ಇಲ್ಲಿಯವರೆಗಿದ್ದ ಪ್ರಮುಖ ಸಮಸ್ಯೆಯಾಗಿತ್ತು. ವಂಚನೆಗೆ ಒಳಗಾದ ಅನೇಕರು ದೂರು ಕೊಡುವುದಕ್ಕೆ ಸಾಧ್ಯ ಆಗಿರಲಿಲ್ಲ. ಆದರೆ ಈಗ ಯಾರೇ ಆದರೂ ವಂಚಕ ಕರೆ ಮತ್ತು ಸಂದೇಶಗಳ ಬಗ್ಗೆ ಚಕ್ಷು ಪ್ಲಾಟ್ ಫಾರ್ಮ್ ನಲ್ಲಿ ಸುಲಭವಾಗಿ ದೂರು ಕೊಡಬಹುದು. ಇದರಿಂದಾಗಿ ಸೈಬರ್ ವಂಚನೆ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯ ಎಂದು ಹೇಳುತ್ತಾರೆ.
ಗಜೇಂದ್ರ ಅವರಂತೆ ನಿಮಗೈ ಸಂಶಯಾಸ್ಪದ ಕರೆ ಬಂದರೆ ಅಥವಾ ಸಂದೇಶ ಸ್ವೀಕೃತವಾದರೆ, ನೀವು ಅವರಂತೆ ಸುಮ್ಮನಾಗಬೇಡಿ. ಚಕ್ಷು ಪ್ಲಾಟ್ ಫಾರಂ ನಲ್ಲಿ ದೂರು ಕೊಡಿ. ಈ ವೇದಿಕೆ, ಬ್ಯಾಕ್ ಎಂಡ್ ರೆಪಾಸಿಟರಿಯಾಗಿ ಕೆಲಸ ಮಾಡತ್ತದೆ. ಈ ರೀತಿಯಾಗಿ, ಇನ್ನಷ್ಟು ಜನರು ವಂಚನೆಗೆ ಒಳಗಾಗೋದನ್ನು ನೀವು ತಪ್ಪಿಸಬಹುದು.
ಪರ್ಸನಲ್ ಫೈನಾನ್ಸ್ ಕುರಿತ ಲೆಟೆಸ್ಟ್ ಅಪ್ಡೇಟ್ಗಳಿಗೆ Money9 App ಡೌನ್ಲೋಡ್ ಮಾಡಿಕೊಳ್ಳಿ